Friday, December 13, 2019

wonder voice: wonder art gallary

wonder voice: wonder art gallary

ವೈಶಿಷ್ಟ್ಯಪೂರ್ಣ ಹಂಚಿನಮನಿ ಆರ್ಟ್‌ಗ್ಯಾಲರಿ



- ಚಿತ್ರಕಲಾವಿದರಿಗೊಂದು ವೇದಿಕೆ
- ಗ್ಯಾಲರಿ ಮಾಡಿ ಕಲಾಪ್ರೀತಿ ಮೆರೆದ ಕರಿಯಪ್ಪ



ಎಚ್.ಕೆ. ನಟರಾಜ

ಹಾವೇರಿ: `ನಗರಕ್ಕೊಂದು ಆರ್ಟ್‌ಗ್ಯಾಲರಿ ಮಾಡಿಕೊಡಿ' ಎಂದು ಎರಡು ದಶಕಗಳ ಕಾಲ ಹೋರಾಡಿದರೂ ಸರ್ಕಾರ ಸ್ಪಂದಿಸದೆ ಇದ್ದಾಗ ಕಲಾವಿದರೋರ್ವರು ತನ್ನ ಮನೆಯನ್ನೇ ಆರ್ಟ್‌ಗ್ಯಾಲರಿ ಮಾಡಿ ಕಲಾವಿದರಿಗೆ ಒಂದು ವೇದಿಕೆ ಕಲ್ಪಿಸಿ ಗಮನಸೆಳೆದಿದ್ದಾರೆ.

ಲಕ್ಷಾಂತರ ರೂ. ವೆಚ್ಚ ಮಾಡಿ ತನ್ನ ಮನೆಯಲ್ಲಿಯೇ ಸುಂದರ, ಸುಸಜ್ಜಿತ ಆರ್ಟ್ ಗ್ಯಾಲರಿ ಮಾಡಿ ತನ್ನ ಕಲಾಪ್ರೀತಿ ಮೆರೆದ ಈ ಕಲಾವಿದನ ಹೆಸರು ಕರಿಯಪ್ಪ ಹಂಚಿನಮನಿ. ಇವರು ವೃತ್ತಿಯಲ್ಲಿ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಆಗಿದ್ದರೂ ಪ್ರವೃತ್ತಿಯಲ್ಲಿ ಪ್ರತಿಭಾವಂತ ಚಿತ್ರಕಲಾವಿದ. ಇವರು ರಾಜ್ಯವಷ್ಟೇ ಅಲ್ಲ ದೇಶಾದ್ಯಂತ ವಿವಿಧೆಡೆ ತಮ್ಮ ಚಿತ್ರಕಲೆ ಪ್ರದರ್ಶಿಸಿ ಹೆಸರುವಾಸಿಯಾಗಿದ್ದಾರೆ.

ಹಾವೇರಿ ನಗರದಲ್ಲೊಂದು ಸುಸಜ್ಜಿತ ಆರ್ಟ್ ಗ್ಯಾಲರಿ ನಿರ್ಮಾಣ ಆಗಬೇಕು ಎಂದು ಜಿಲ್ಲೆಯ ಕಲಾವಿದರು, ಸಾಹಿತಿಗಳು ೨೫-೩೦ವರ್ಷಗಳಿಂದಲೂ ಹೋರಾಟ, ಪ್ರತಿಭಟನೆ ಮಾಡುತ್ತಲೇ ಬಂದಿದ್ದಾರೆ. ಬೀದಿಯಲ್ಲಿ ಚಿತ್ರಕಲೆ ಬಿಡಿಸಿ, ಬೀದಿಯಲ್ಲಿ ಚಿತ್ರಕಲೆ ಪ್ರದರ್ಶನ ಮಾಡಿ, ರಸ್ತೆ ಮೇಲೆ ಚಿತ್ರ ಬಿಡಿಸಿ ಭಿನ್ನ ವಿಭಿನ್ನವಾಗಿ ಪ್ರತಿಭಟನೆ ಮಾಡಿ ಸರ್ಕಾರದ ಕಣ್ತೆರೆಸುವ ಕೆಲಸ ಮಾಡಿದ್ದಾರೆ. ಆದರೆ, ಇದ್ಯಾವುದಕ್ಕೂ ಸರ್ಕಾರ ಈವರೆಗೂ ಸ್ಪಂದಿಸಿಯೇ ಇಲ್ಲ.

`ಹಂಚಿನಮನಿ ಆರ್ಟ್ ಗ್ಯಾಲರಿ'..

ಕಲೆ ಪ್ರದರ್ಶನಕ್ಕೆ ಉತ್ತಮ ಗ್ಯಾಲರಿ ವ್ಯವಸ್ಥೆ ಇಲ್ಲದೇ ಚಿತ್ರಕಲಾವಿದರು ಪರದಾಡುವುದನ್ನು ಮನಗಂಡ ಕರಿಯಪ್ಪ ಹಂಚಿನಮನಿ, ನಗರದ ನಂದಿ ಲೇಔಟ್‌ನಲ್ಲಿರುವ ತಮ್ಮ ನೂತನ ಮನೆಯ ಮಹಡಿಯ ಒಂದು ಭಾಗವನ್ನು ಆರ್ಟ್ ಗ್ಯಾಲರಿಗೆ ಮೀಸಲಿಟ್ಟಿದ್ದಾರೆ. ಇದಕ್ಕೆ `ಹಂಚಿನಮನಿ ಆರ್ಟ್ ಗ್ಯಾಲರಿ' ಎಂದು ಹೆಸರಿಟ್ಟಿದ್ದಾರೆ. ಇಲ್ಲಿ ಚಿತ್ರಕಲೆ ಪ್ರದರ್ಶನಕ್ಕೆ ಬೇಕಾದ ವಿಶೇಷ ವಿದ್ಯುತ್ ವ್ಯವಸ್ಥೆ, ಕಲಾಕೃತಿಗಳ ಪ್ರದರ್ಶನಕ್ಕೆ ಬೇಕಾದ ಹ್ಯಾಂಗರ್‍ಸ್ ಸೇರಿದಂತೆ ಕಲಾ ಪ್ರದರ್ಶನಕ್ಕೆ ಬೇಕಾದ ಅಗತ್ಯ ಎಲ್ಲ ವ್ಯವಸ್ಥೆ ಮಾಡಿದ್ದಾರೆ.

ಕಲಾ ಪ್ರದರ್ಶನಕ್ಕೆ ಬಂದ ಕಲಾವಿದರ ವಾಸ್ತವ್ಯಕ್ಕಾಗಿ ಒಂದು ಪ್ರತ್ಯೇಕ ಕೊಠಡಿ ವ್ಯವಸ್ಥೆವೂ ಮಾಡಿದ್ದಾರೆ. ಸುಮಾರು ೩೦-೩೫ ಕಲಾಕೃತಿಗಳು ಪ್ರದರ್ಶನ ಮಾಡುವಷ್ಟು ವಿಶಾಲವಾದ ಗ್ಯಾಲರಿ ಇದಾಗಿದ್ದು ಕಲಾ ಗ್ಯಾಲರಿಗೆ ತಕ್ಕಂತೆ ಜನಪದ ಕಲಾ ಶೈಲಿಯಲ್ಲಿ ಗ್ಯಾಲರಿಯ ಗೋಡೆ, ಬಾಗಿಲು, ಕಿಟಕಿ, ಅಲಂಕಾರ ಸಾಮಗ್ರಿ ಅಳವಡಿಸಿ ತಮ್ಮ ಗ್ಯಾಲರಿ ವಿಶಿಷ್ಟ, ವಿಭಿನ್ನ ಹಾಗೂ ಆಕರ್ಷಣೀಯವನ್ನಾಗಿಸಿದ್ದಾರೆ.

ಮನೆಯೂ ವಿಭಿನ್ನ...

ಕರಿಯಪ್ಪ ಹಂಚಿನಮನಿಯರು ಕಟ್ಟಿಸಿದ ನೂತನ ಮನೆ ಕೂಡ ವಿಶಿಷ್ಟವಾಗಿದ್ದು ಮನೆಯೇ ಒಂದು ಸುಂದರ ಕಲಾಕೃತಿಯಂತಿದೆ. ಮನೆಯ ಕಾಂಪೌಂಡ್ ಮೇಲೆ ಜನಪದ ಕಲಾಚಿತ್ರಗಳು, ಗೇಟಿಗೆ ಎತ್ತಿನಗಾಡಿಯ ಚಕ್ರ, ನೈಸರ್ಗಿಕವಾಗಿರುವ ಮರದ ಹಲಗೆಗಳನ್ನು ಕಲಾತ್ಮಕವಾಗಿಟ್ಟು ಜೋಡಿಸಿರುವ ಬಾಗಿಲು- ಚೌಕಟ್ಟು ಹೀಗೆ ಎಲ್ಲವೂ ವಿಶಿಷ್ಟವಾಗಿದ್ದು ಒಟ್ಟಾರೆ ಮನೆ ಅಕ್ಷರಶಃ `ಕಲಾ ಮನೆ'ಯಂತಾಗಿದೆ. ಇದು ಕರಿಯಪ್ಪ ಅವರಿಗೆ ಕಲೆ ಮೇಲಿನ ಪ್ರೀತಿ, ಅಭಿಮಾನದ ಸಂಕೇತದಂತಿದೆ.

ಉದ್ಘಾಟನೆಯೂ ವಿಶೇಷ...

ಕರಿಯಪ್ಪ ಹಂಚಿನಮನಿಯವರು ಸೆ. ೨೨ರಂದು ಬೆಳಿಗ್ಗೆ ೧೦ಗಂಟೆಗೆ `ಹಂಚಿನಮನಿ ಆರ್ಟ್ ಗ್ಯಾಲರಿ'ಯ ಉದ್ಘಾಟನೆ ಇಟ್ಟುಕೊಂಡಿದ್ದು ಇದನ್ನೂ ವಿಶಿಷ್ಟವಾಗಿ ಆಯೋಜಿಸಿಕೊಂಡಿದ್ದಾರೆ. ಅಂದು ರಾಜ್ಯಾದ್ಯಂತದಿಂದ ೫೦ಕ್ಕೂ ಹೆಚ್ಚು ಕಲಾವಿದರನ್ನು ಕರೆಸಿ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಶಿಬಿರ ಏರ್ಪಡಿಸಿದ್ದಾರೆ. ಉದ್ಘಾಟನೆಯ ದಿನ ನೂತನ ಗ್ಯಾಲರಿಯಲ್ಲಿ ಹಂಚಿನಮನಿಯವರ ಕಲಾಕೃತಿಗಳು ರಾರಾಜಿಸಿದರೆ, ಮರುದಿನ ಉಳಿದ ಕಲಾವಿದರ ಕಲಾಕೃತಿಗಳು ಗ್ಯಾಲರಿಯಲ್ಲಿ ಪ್ರದರ್ಶನಗೊಳ್ಳಲಿವೆ.

ಒಟ್ಟಾರೆ `ಹಂಚಿನಮನಿ ಆರ್ಟ್ ಗ್ಯಾಲರಿ' ಚಿತ್ರಕಲಾವಿದರಿಗೆ ಒಂದು ವೇದಿಕೆ ಕಲ್ಪಿಸಿ, ಕಲೆಗೆ ಪ್ರೋತ್ಸಾಹದಾಯಕವಾಗಲಿದೆ ಎಂದು ಅಪೇಕ್ಷಿಸಲಾಗಿದೆ.

--- ---

ಚಿತ್ರಕಲಾವಿದವರಿಗೆ ತಮ್ಮ ಕಲೆ ಪ್ರದರ್ಶನಕ್ಕೆ ವೇದಿಕೆ ಮುಖ್ಯ. ನಗರದಲ್ಲಿ ಉತ್ತಮ ಆರ್ಟ್ ಗ್ಯಾಲರಿ ಇಲ್ಲ. ಕಲಾವಿದರು ಅವ್ಯವಸ್ಥಿತ ಸಭಾಭವನಗಳಲ್ಲಿ ಇಲ್ಲವೇ ಬಯಲಿನಲ್ಲಿ ತಮ್ಮ ಕಲೆ ಪ್ರದರ್ಶಿಸುವ ಸ್ಥಿತಿ ಇದೆ. ಕಲಾವಿದರ ಈ ಕಷ್ಟ ಕಂಡು ನನ್ನ ಮನೆಯಲ್ಲಿಯೇ ಆರ್ಟ್ ಗ್ಯಾಲರಿ ಮಾಡಿದ್ದೇನೆ. ಈ ಗ್ಯಾಲರಿ ಉಪಯೋಗಕ್ಕೆ ಯಾವುದೇ ಶುಲ್ಕ ಇಲ್ಲ. ಉಚಿತವಾಗಿ ಕಲಾವಿದರಿಗೆ ಈ ಗ್ಯಾಲರಿ ಲಭ್ಯವಾಗಲಿದ್ದು ಇದು ನನ್ನ ಅಳಿಲು ಕಲಾಸೇವೆ.

-ಕರಿಯಪ್ಪ ಹಂಚಿನಮನಿ, ಕಲಾವಿದ.



---- ---

ಹೋರಾಟಕ್ಕೆ ಸಿಕ್ಕಿಲ್ಲ ಫಲ...

ಹಾವೇರಿಯಲ್ಲೊಂದು ಆರ್ಟ್ ಗ್ಯಾಲರಿ ಆಗಬೇಕು ಎಂದು ಜಿಲ್ಲೆಯ ಕಲಾವಿದರು, ಸಾಹಿತಿಗಳು ಎಲ್ಲರೂ ಸೇರಿ ಎಂದು ಎರಡೂವರೆ ದಶಕದಿಂದಲೂ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಆದರೆ, ಈವರೆಗೆ ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ. ಕಲಾವಿದ ಕರಿಯಪ್ಪ ಅವರು ತಮ್ಮದೇ ಮನೆಯಲ್ಲಿಯೇ ಸ್ವಂತ ಖರ್ಚಿನಲ್ಲಿ ಸುಂದರ ಆರ್ಟ್‌ಗ್ಯಾಲರಿ ಮಾಡಿ ಅವರಿಗೆ ಕಲೆ ಹಾಗೂ ಕಲಾವಿದರ ಮೇಲಿರುವ ಪ್ರೀತಿ, ಅಭಿಮಾನ ವ್ಯಕ್ತಪಡಿಸಿರುವುದು ಪ್ರಶಂಸನೀಯ.






wonder art gallary







wonder temple

ಕುರಿ ಹಾಲಿನ ದೇಗುಲ!


- ಅಪರೂಪದ ದೇವಸ್ಥಾನಗಳು
- ೩೫-೪೦ ಸಾವಿರ ಲೀಟರ್ ಹಾಲಿನಿಂದ ನಿರ್ಮಾಣ


ಶ್ರಮಜೀವಿಗಳೆಂದೇ ಗುರುತಿಸಲ್ಪಡುವ ಅಲೆಮಾರಿ ಕುರಿಗಾರರು ಅಪ್ಪಟ ಶುದ್ಧ ಕುರಿ ಹಾಲು ಬಳಸಿ ನಿರ್ಮಿಸಿದ ಎರಡು ಬಲು ಅಪರೂಪದ ದೇಗುಲಗಳು ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ಜಿಲ್ಲೆಯ ಸವಣೂರು ತಾಲೂಕಿನ ಮಣ್ಣೂರು ಮತ್ತು ಬಂಕಾಪುರದ ಮಧ್ಯೆ ಇವೆ.
ಅಪ್ಪಟ ಕುರಿ ಹಾಲು ಬಳಸಿ ಕಟ್ಟಲ್ಪಟ್ಟ ಈ ಅಪರೂಪದ ಈ ದೇವಾಲಯಗಳಲ್ಲಿ ಒಂದು ಶ್ರೀರೇವಣಸಿದ್ದೇಶ್ವರರ ದೇವಾಲಯವಾಗಿದ್ದರೆ, ಇನ್ನೊಂದು ಪದ್ಮಗೌಡ- ಚಿಮಲಾದೇವಿ ದೇವಸ್ಥಾನವಾಗಿದೆ. ಇದು ಸವಣೂರು ತಾಲೂಕು ತೆಗ್ಗಿಹಳ್ಳಿ ಗ್ರಾಪಂ ವ್ಯಾಪ್ತಿಯ ಮಣ್ಣೂರು ಸಮೀಪವಿದೆ.
ದೇವಸ್ಥಾನದ ತಳಪಾಯ ನಿರ್ಮಾಣಕ್ಕೆ ಏಳು ನದಿಗಳ ನೀರು ಬಳಸಲಾಗಿದೆ. ತಳಪಾಯದ ಬಳಿಕ ಇಡೀ ಕಟ್ಟಡವನ್ನು ಕುರಿ ಹಾಲಿನಲ್ಲಿಯೇ ಕಟ್ಟಲಾಗಿದೆ. ೩೫ರಿಂದ ೪೦ ಸಾವಿರ ಲೀಟರ್‌ಗೂ ಹೆಚ್ಚು ಹಾಲು ಈ ದೇವಾಲಯಗಳ ನಿರ್ಮಾಣಕ್ಕೆ ಬಳಸಲಾಗಿದೆ.
ದೇವರ ಕೃಪೆಗಾಗಿ ಒಬ್ಬೊಬ್ಬರು ಒಂದೊಂದು ರೀತಿ ದೇಗುಲಗಳನ್ನು ಕಟ್ಟುತ್ತಾರೆ. ಕೆಲವರು ಬೆಳ್ಳಿಯಿಂದ, ಬಂಗಾರದಿಂದ ಇನ್ನು ಕೆಲವರು ವಿವಿಧ ಲೋಹ, ವಿಶಿಷ್ಟ ಕಲ್ಲು- ಮಣ್ಣು ಬಳಸಿ ದೇವಸ್ಥಾನಗಳನ್ನು ಕಟ್ಟುತ್ತಾರೆ. ಇಂಥ ದೇವಾಲಯಗಳನ್ನು ದೇಶದಲ್ಲಿ ಅಲ್ಲಲ್ಲಿ ಕಾಣಲು, ಕೇಳಲು ಸಿಗುತ್ತವೆ. ಆದರೆ, ಕುರಿ ಹಾಲು ಬಳಸಿ ಕಟ್ಟಿದ ದೇವಸ್ಥಾನಗಳಿರುವ ಬಗ್ಗೆ ಕಾಣುವುದು, ಕೇಳಿದ್ದು ಬಹಳ ವಿರಳ. ಇಂಥ ಅಪರೂಪದ ದೇವಸ್ಥಾನಗಳ ಸಾಲಿಗೆ ಈ ಎರಡು ದೇಗುಲಗಳು ಸೇರುತ್ತವೆ.
ಈ ವಿಶಿಷ್ಟ ದೇವಸ್ಥಾನವನ್ನು ಯಾವುದೇ ಇಂಜಿನೀಯರ್‌ನ ಸಲಹೆ ಪಡೆಯದೆ, ಯಾವುದೇ ಕಟ್ಟಡ ಕಾರ್ಮಿಕರ ಸಹಾಯ ಪಡೆಯದೆ ಕೇವಲ ಕುರಿಗಾರರು ಸ್ವತಃ ಶ್ರಮವಹಿಸಿ ಸುತ್ತಲಿನ ಗ್ರಾಮಸ್ಥರ ಸಹಕಾರದೊಂದಿಗೆ ನಿರ್ಮಿಸಿದ್ದಾರೆ. ದೇವಾಲಯ ನಿರ್ಮಾಣವನ್ನು ಒಂದು ವ್ರತವಾಗಿ ಸ್ವೀಕರಿಸಿದ ಕುರಿಗಾರರು, ದೇವಾಲಯ ಪೂರ್ಣಗೊಳ್ಳುವವರೆಗೂ ಮಾಂಸಾಹಾರ, ಮದ್ಯ ಸೇವನೆ ಮಾಡದೆ ದೇವಾಲಯ ಕಟ್ಟುವ ಕಾರ್ಯದಲ್ಲಿ ತೊಡಗಿಕೊಂಡಿದ್ದು ಇಲ್ಲಿ ಗಮನಾರ್ಹ.
ಬೇಸಿಗೆಯಲ್ಲಿ ಕುರಿಗಳು ಹೆಚ್ಚು ಹಾಲು ಕೊಡುವುದರಿಂದ ಪ್ರತಿದಿನ ೧೫೦ರಿಂದ ೨೦೦ ಲೀ. ಹಾಲು ಬಳಸಿ ಆರು ತಿಂಗಳ ಅವಧಿಯಲ್ಲಿ ಈ ದೇಗುಲಗಳನ್ನು ಕಟ್ಟಲಾಗಿದೆ. ಕುರಿ ಹಾಲಿನಲ್ಲಿ ಕಟ್ಟಿದ ಈ ವಿಶಿಷ್ಟ ದೇಗುಲಗಳ ನಿರ್ಮಾಣ ಕಾರ್ಯದಲ್ಲಿ ಮಣ್ಣೂರು, ಬಂಕಾಪುರ ಸೇರಿದಂತೆ ಸುತ್ತಲಿನ ಗ್ರಾಮಸ್ಥರ ಸಹಕಾರವೂ ಪ್ರಮುಖವಾಗಿದೆ.
ಅಷ್ಟಕ್ಕೂ ಈ ದೇವಾಲಯಗಳು ಬಹಳ ಪುರಾತನ ಕಾಲದ ದೇವಾಲಯಗಳಲ್ಲ. ೨೦೦೮ರಲ್ಲಿ ಕಟ್ಟಿದ ನೂತನ ದೇವಸ್ಥಾನಗಳಾಗಿವೆ. ಪ್ರತಿ ವರ್ಷ ಶ್ರೀರೇವಣ ಸಿದ್ದೇಶ್ವರರ ಜಯಂತಿಯಂದು ಇಲ್ಲಿ ಜಾತ್ರೆ ನಡೆಯುತ್ತದೆ. ಜಾತ್ರೆಯಲ್ಲಿ ಭಕ್ತರಿಂದ ನೂರಾರು ಲೀಟರ್ ಕುರಿ ಹಾಲು ಸಂಗ್ರಹವಾಗುತ್ತದೆ.  ಈ ಹಾಲನ್ನೇ ಬಂದ ಭಕ್ತರಿಗೆ ಪ್ರಸಾದ ವಾಗಿ ನೀಡುವುದು ಇಲ್ಲಿಯ ವಿಶೇಷತೆಗಳಲ್ಲೊಂದಾಗಿದೆ.
ವಿವಾಹ ನಡೆದ ಪುಣ್ಯ ನೆಲ...
ದೇವಾಲಯಗಳನ್ನು ಹಾಲಿನಿಂದ ಈ ಸ್ಥಳದಲ್ಲಿ ಏಕೆ ಕಟ್ಟಿದರು ಎಂಬುದಕ್ಕೆ ಕಥೆ ಇದೆ. ಈ ಕಥೆಯ ಬಗ್ಗೆ ಬಾಳೆಹೊನ್ನೂರಿನ ರಂಭಾಪುರಿ ಮಠದ ಚರಿತ್ರೆಯಲ್ಲಿ ಉಲ್ಲೇಖವೂ ಇದೆ ಎನ್ನಲಾಗಿದೆ. ಹಾವೇರಿ ಜಿಲ್ಲೆಯ ಕುಂದೂರು ಗುಡ್ಡದ ಗುಹೆಯಲ್ಲಿದ್ದ ರಾಕ್ಷಸಿಯನ್ನು ಸಂಹರಿಸಿದ ಚಿಮಲಾದೇವಿ (ಇಂದ್ರಗಿರಿಯ ಚಕ್ರವರ್ತಿಯ ಮಗಳು)ಯನ್ನು ಪದ್ಮಗೌಡರು ಕರೆದುಕೊಂಡು ಮಣ್ಣೂರು ಮತ್ತು ಬಂಕಾಪುರ ನಡುವಿನ ಈ ಸ್ಥಳಕ್ಕೆ ಬರುತ್ತಾರೆ. ಅದೇ ಸಮಯಕ್ಕೆ ಅಲ್ಲಿಗೆ ಬಂದ ಶ್ರೀರೇವಣಸಿದ್ಧೇಶ್ವರ ಶ್ರೀಗಳು ಅಲ್ಲಿ ಅವರಿಬ್ಬರ ವಿವಾಹ ನೆರವೇರಿಸುತ್ತಾರೆ. ವಿವಾಹ ಮಹೋತ್ಸವ ನಡೆದ ಪವಿತ್ರ ಸ್ಥಳದಲ್ಲಿಯೇ ಈಗ ಶ್ರೀರೇವಣಸಿದ್ದೇಶ್ವರ ಹಾಗೂ ಪದ್ಮಗೌಡ- ಚಿಮಲಾದೇವಿಯ ಎರಡು ಪ್ರತ್ಯೇಕ ದೇವಸ್ಥಾನಗಳು ಕುರಿ ಹಾಲಿನಿಂದ ನಿರ್ಮಾಣಗೊಂಡಿವೆ.
ಹಾಲಿನಲ್ಲೇ ಏಕೆ ಕಟ್ಟಿದರು?...
ಶ್ರೀರೇವಣಸಿದ್ದೇಶ್ವರರು ಪದ್ಮಗೌಡ- ಚಿಮಲಾದೇವಿ ವಿವಾಹ ನೆರವೇರಿಸಿದ ಪವಿತ್ರ ಸ್ಥಳದಲ್ಲಿ ದೇವಸ್ಥಾನ ಕಟ್ಟುವ ಬಗ್ಗೆ ೨೦೦೬ರಲ್ಲಿ ಅಲೆಮಾರಿ ಕುರುಬರು, ಮಣ್ಣೂರು ಹಾಗೂ ಬಂಕಾಪೂರದ ಗ್ರಾಮಸ್ಥರು, ಹಿರಿಯರು ಸೇರಿ ಚರ್ಚಿಸುತ್ತಾರೆ. ಅದಕ್ಕಾಗಿ ಶ್ರೀಸಾಲಿ ದುರ್ಗಾದೇವಿ ಸಂಚಾರಿ ಕುರುಬರ ಹಾಗೂ ಕುರಿ ಸಾಕಾಣಿಕೆದಾರರ ಸಂಘ ಮಾಡಿಕೊಳ್ಳುತ್ತಾರೆ.  ದೇವಾಲಯ ನಿರ್ಮಾಣದ ಬಗ್ಗೆ ಕೆಂಡದಮಠದ ಸ್ವಾಮೀಜಿಯವರ ಎದುರು ವಿಷಯ ಪ್ರಸ್ತಾಪಿಸಿದಾಗ ಅವರು, ಈ ಹಿಂದೆ ಈ ಪ್ರದೇಶದಲ್ಲಿ ದೇವಾಲಯ ನಿರ್ಮಿಸಲು ಹಲವರು  ಮುಂದಾಗಿದ್ದರೂ ಅದು ಪೂರ್ಣಗೊಂಡಿಲ್ಲ. ದೇವಾಲಯ ಪೂರ್ಣಗೊಳ್ಳಬೇಕಾದರೆ ದೇಗುಲವನ್ನು ಒಂದು ರಾತ್ರಿಯಲ್ಲಿ ಕಟ್ಟಬೇಕು ಇಲ್ಲವೇ ಕುರಿ ಹಾಲಿನಲ್ಲಿ ಕಟ್ಟಬೇಕು. ಆಗ ಮಾತ್ರ ದೇವಸ್ಥಾನ ಕಟ್ಟಲು ಸಾಧ್ಯ ಎನ್ನುತ್ತಾರೆ. 
ಹಿರಿಯರೆಲ್ಲರೂ ಸೇರಿ ಆಲೋಚಿಸಿ, ಒಂದು ರಾತ್ರಿಯಲ್ಲಂತೂ ದೇವಸ್ಥಾನ ಕಟ್ಟಲು ಆಗದು. ಆದ್ದರಿಂದ ಕುರಿ ಹಾಲಿನಲ್ಲಿ ಕಟ್ಟಬಹುದು ಎಂಬ ತೀರ್ಮಾನಕ್ಕೆ ಬರುತ್ತಾರೆ. ದೇವಸ್ಥಾನ ಕಟ್ಟಲುದ್ದೇಶಿಸಿದ ಸ್ಥಳ ಮಹ್ಮದಹುಸೇನ್ ಮನಿಯಾರ ಎಂಬುವರಿಗೆ ಸೇರಿದ್ದಾಗಿತ್ತು. ದೇವಸ್ಥಾನ ಕಟ್ಟುತ್ತೇವೆ ಎಂದಾಗ ಅವರು ತುಂಬು ಮನಸ್ಸಿನಿಂದ ಕೊಟ್ಟರು. ಅದರಂತೆ ಕುರಿ ಹಾಲಿನ ಸಂಗ್ರಹಕ್ಕೆ ಸಿದ್ಧತೆಯನ್ನೂ ಮಾಡಿಕೊಂಡು ಪ್ರತಿದಿನ ೧೫೦-೨೦೦ಲೀ. ಹಾಲು ಸಂಗ್ರಹಿಸಲು ಯೋಜನೆ ರೂಪಿಸಿಕೊಂಡರು.
ಕಟ್ಟಡ ನಿರ್ಮಾಣ ಮಾಡುವವರು ಯಾವುದೇ ದುಶ್ಚಟ ಮಾಡದೆ ಶುಭ್ರವಾಗಿರಲು ಪಣತೊಟ್ಟರು. ಆರು ತಿಂಗಳಲ್ಲಿ ಎರಡು ಸುಂದರ ದೇವಾಲಯಗಳು ನಿರ್ಮಾಣಗೊಂಡವು. ಒಂದರಲ್ಲಿ ಶ್ರೀರೇವಣಸಿದ್ದೇಶ್ವರರ ಮೂರ್ತಿ ಇದ್ದರೆ ಇನ್ನೊಂದರಲ್ಲಿ ಪದ್ಮಗೌಡ- ಚಿಮಲಾದೇವಿ ಮೂರ್ತಿಗಳಿವೆ.
-----ಬಾಕ್ಸ್ ----
ಏಳು ನದಿ ನೀರು, ಹಾಲಿನಿಂದ ನಿರ್ಮಾಣ...
ಏಳು ನದಿಗಳ ನೀರು ತಂದು ತಳಪಾಯ ಮಾಡಿದ್ದು ದೇವಾಲಯಗಳನ್ನು ಕುರಿ ಹಾಲಿನಿಂದ ಕಟ್ಟಲಾಗಿದೆ. ಪ್ರತಿವರ್ಷ ಶ್ರೀರೇವಣಸಿದ್ದೇಶ್ವರರ ಜಯಂತಿ ನಿಮಿತ್ತ ಜಾತ್ರೆ ಮಾಡಲಾಗುತ್ತದೆ. ಜಾತ್ರೆಯಲ್ಲಿ ಕುರಿ ಹಾಲಿನ ಮೆರವಣಿಗೆ ನಡೆಯುತ್ತದೆ. ನೂರಾರು ಕೊಡ ಹಾಲು ಬರುತ್ತದೆ. ಅದನ್ನೇ ಭಕ್ತರಿಗೆ ಪ್ರಸಾದವಾಗಿ ನೀಡಲಾಗುತ್ತದೆ. ರಾತ್ರಿ ಡೊಳ್ಳಿನ ಪದಗಳ ಸ್ಪರ್ಧೆ, ಆಲಗ ಹಾಯುವ ಕಾರ್ಯಕ್ರಮ (ಖಡ್ಗ ಹಾಕಿಕೊಳ್ಳುವುದು) ನಡೆಯುತ್ತದೆ.
-ವಿಠ್ಠಲ ಬನ್ನೆ, ಸಂಚಾರಿ ಕುರುಬರ ಹಾಗೂ ಕುರಿ ಸಾಕಾಣಿಕೆದಾರರ ಸಂಘ.

ಹಾವೇರಿ: ಕುರಿ ಹಾಲಿನಲ್ಲಿ ನಿರ್ಮಾಣಗೊಂಡಿರುವ ದೇಗುಲಗಳು.